ಮಣ್ಣಿನದೋಣಿ, ಮುಂಜಾನೆಯ ಮಂಜು, ಮಿಸ್ಟರ್ ಐರಾವತ ಸೇರಿದಂತೆ ಹಲವಾರು ಯಶಸ್ವೀ ಚಲನಚಿತ್ರಗಳನ್ನು ನಿರ್ಮಿಸಿದ ಸಂದೇಶ್ ಪ್ರೊಡಕ್ಷನ್ ಬಹಳ ದಿನಗಳ ನಂತರ ಶಿವರಾಜ್ ಕುಮಾರ್ ಜೊತೆ ಘೋಸ್ಟ್ ಎಂಬ ಹಾರರ್ ಚಿತ್ರ ನಿರ್ಮಿಸಿದ್ದು, ಆ ಚಿತ್ರ ಇದೇ 19ರ ಗುರುವಾರ ದೇಶಾದ್ಯಂತ ಬಿಡುಗಡೆಯಾಗುತ್ತಿದೆ, ಶ್ರೀನಿ ಅವರ ನಿರ್ದೇಶನದ ಈ ಚಿತ್ರದ ಬಿಡುಗಡೆಪೂರ್ವ ಪತ್ರಿಕಾ ಗೋಷ್ಟಿ ಶಿವರಾಜಕುಮಾರ್ ಅವರ ನಿವಾಸದಲ್ಲಿ ನಡೆಯಿತು. ಇಲ್ಲಿ ನಿರ್ದೇಶಕ ಶ್ರೀನಿ, ನಿರ್ಮಾಪಕ ಎನ್. ಸಂದೇಶ್ ಹಾಗೂ ಶಿವಣ್ಣ, ಛಾಯಾಗ್ರಾಹಕ ಮಹೇಂದ್ರಸಿಂಹ ಮುಂತಾದವರು ಮಾಹಿತಿ ಹಂಚಿಕೊಂಡರು.
ಮೊದಲಿಗೆ ನಿರ್ಮಾಪಕ ಎನ್.ಸಂದೇಶ್ ಮಾತನಾಡುತ್ತ ಸದ್ಯ ಕರ್ನಾಟಕದಲ್ಲೇ 275 ಚಿತ್ರಮಂದಿರಗಳು ಫೈನಲ್ ಆಗಿದ್ದು, ಗುರುವಾರದ ವೇಳೆಗೆ ನೂರಕ್ಕೂ ಹೆಚ್ಚು ಚಿತ್ರಮಂದಿರ ಸೇರ್ಪಡೆಯಾಗುವ ನಿರೀಕ್ಷೆಯಿದೆ, ಸದ್ಯ ನಮ್ಮ ಚಿತ್ರ ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ತೆಲುಗು ಭಾಷೆಯಲ್ಲಿ ಮಾತ್ರ ಒಂದುವಾರ ತಡವಾಗಿ ರಿಲೀಸಾಗುತ್ತಿದೆ, ನಮ್ಮ ಸಸ್ಥೆಯಲ್ಲಿ ಶಿವಣ್ಣ ನಟಿಸಿರುವ ಮೂರನೇ ಚಿತ್ರ. ಕಳೆದ ನವೆಂಬರ್ನಲ್ಲಿ ಪ್ರಾರಂಭಿಸಿ, ಅಂದುಕೊಂಡ ಹಾಗೆ ಒಂದು ವರ್ಷದಲ್ಲಿ ಸಿನಿಮಾ ಮುಗಿಸಿ ರಿಲೀಸ್ ಮಾಡುತ್ತಿದ್ದೇವೆ, ಇದಕ್ಕೆಲ್ಲ ನಿರ್ದೇಶಕ ಶ್ರೀನಿ ಅವರ ಎಫರ್ಟ್ ಕಾರಣ, ಸಾಗರದಾಚೆಯ ಹಲವಾರು ದೇಶಗಳಲ್ಲಿ ಚಿತ್ರ ಅದ್ದೂರಿಯಾಗಿ ತೆರೆಕಾಣುತ್ತಿದೆ. ಹಿಂದಿನದಿನ ರಾತ್ರಿ 12ಕ್ಕೇ ಫ್ಯಾನ್ಸ್ ಷೋ ಆಯೋಜಿಸಲಾಗಿದೆ, ಅದು ಎಷ್ಟು ಸೆಂಟರ್ಗಳಲ್ಲಿ ಅನ್ನೋದು ಮುಂದೆ ಗೊತ್ತಾಗಲಿದೆ ಎಂದರು.
ನಂತರ ನಾಯಕನಟ ಶಿವರಾಜ್ಕುಮಾರ್ ಮಾತನಾಡಿ ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ 3 ಶೇಡ್ ಇರುತ್ತದೆ. ಈ ಸಿನಿಮಾನ ಪಾರ್ಟ್ 2, 3, ಕೂಡ ಮಾಡಬಹುದು, ಅನುಪಮ್ ಖೇರ್ ಅವರಜೊತೆ ಸ್ಕ್ರೀನ್ ಶೇರ್ ಮಾಡಿದ್ದು ಒಳ್ಳೇ ಅನುಭವ, ಮುಂಬಯಿಯಲ್ಲಿ ಪ್ರೊಮೋಷನ್ ಮಾಡಿ ಅಲ್ಲೆಲ್ಲ ನಮಗೆ ತುಂಬಾ ಒಳ್ಳೆಯ ಪ್ರತಿಕ್ರಿಯೆ ಸಿಕ್ತು ಎಂದು ಸಿನಿಮಾ ಹಾಗೂ ಮುಂಬೈ ಅನುಭವದ ಕುರಿತಂತೆ ಹೇಳಿಕೊಂಡರು.
ನಿರ್ದೇಶಕ ಶ್ರೀನಿ ಮಾತನಾಡುತ್ತ ಘೋಸ್ಟ್ 48 ಗಂಟೆಗಳಲ್ಲಿ ನಡೆಯುವ ಘಟನೆಗಳನ್ನು ಒಳಗೊಂಡ ಚಿತ್ರ, ಈ ಸಬ್ಜೆಕ್ಟ್ ಮಾಡಿದಾಗಲೇ ಇದರ ನಾಯಕ ಶಿವಣ್ಣ ಅಂದುಕೊಂಡಿದ್ದೆವು, ಅವರಿಗೆ ನಾನು ಈ ಕಾನ್ಸೆಪ್ಟ್ ಹೇಳಿದ್ದು ಮೈಸೂರಿನ ಶಕ್ತಿಧಾಮದಲ್ಲಿ, ಒನ್ಲೈನ್ ಕಥೆ ಕೇಳಿಯೇ ಒಪ್ಪಿದ್ದರು, ಚಿತ್ರದ ಶೇ.70 ರಷ್ಟು ಕಥೆ ಜೈಲಲ್ಲೇ ನಡೆಯುತ್ತದೆ, ಜೈಲ್ ಸೆಟ್ಟನ್ನು ಮಿನರ್ವಮಿಲ್ನಲ್ಲಿ ಹಾಕಿದ್ದೆವು, ಅಲ್ಲಿ ನಮ್ಮದೇ ಕೊನೆಯಸೆಟ್, ಶಿವಣ್ಣ ಪೂರ್ತಿ ಇನ್ವಾಲ್ವ್ ಆಗಿ ಸಿನಿಮಾ ಮುಗಿಸಿಕೊಟ್ಟರು. ಅದಕ್ಕೆ ಸರಿಯಾಗಿ ನಿರ್ಮಾಪಕರು ನನಗೆ ಪೂರ್ತಿ ಸ್ವಾತಂತ್ರ್ಯ ಕೊಟ್ಟಿದ್ದರಿಂದ ಉತ್ತಮ ತಂತ್ರಜ್ಞರ ಕೈಲಿ ಕೆಲಸ ಮಾಡಿಸಿಕೊಳ್ಳಲು ಅನುಕೂಲವಾಯಿತು, ಸಮಾಜದಲ್ಲಿ ಒಂದು ವ್ಯವಸ್ಥೆ ಏರುಪೇರಾದರೆ ಏನಾಗಬಹುದು ಎಂದು ಚಿತ್ರದ ಮೂಲಕ ಹೇಳಿದ್ದೇವೆ ಎಂದರು, ಈ ಚಿತ್ರವನ್ನು ಪೆನ್ ಸ್ಟುಡಿಯೋ ಸಂಸ್ಥೆ ಬಿಡುಗಡೆ ಮಾಡುತ್ತಿದೆ. ಮಹೇನ್ಸಿಂಹ ಅವರ ಛಾಯಾಗ್ರಹಣ, ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಶ್ರೀನಿ ಘೋಸ್ಟ್ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.